
ಶಿರೂರು ಗುಡ್ಡ ಕುಸಿದು ಇಂದು 13ನೇ ದಿನವಾಗಿದೆ. ಗುಡ್ಡ ಕುಸಿತದ ಸ್ಥಳದಲ್ಲಿ ನಾಪತ್ತೆಯಾಗಿದ್ದ ಅರ್ಜುನ್, ಜಗನ್ನಾಥ್ ನಾಯ್ಕ್ ಮತ್ತು ಲೋಕೇಶ್ ತೀವ್ರ ಶೋಧ ನಡೆಸಿದರೂ ಪತ್ತೆಯಾಗಿಲ್ಲ. ಮುಳುಗಡೆ ತಜ್ಞ ಈಶ್ವರ ಮಲ್ಪೆ ಮಾತನಾಡಿ, ಗಂಗಾವಳಿ ನದಿ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ.
ನಮ್ಮ ಪ್ರಾಣವನ್ನೇ ಪಣವಾಗಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾಪತ್ತೆಯಾದವರ ಕುಟುಂಬಸ್ಥರ ಕಣ್ಣೀರು ನಮಗೆ ನೋಡಲಾಗುತ್ತಿಲ್ಲ. ನಾವು ಬಹಳಕಡೆ ಕೆಲಸ ಮಾಡಿದ್ದೇವೆ, ಆದರೆ ಇಲ್ಲಿ ಕೆಲಸ ಮಾಡುತ್ತಿರುವುದು ಬಹಳ ಸವಾಲಾಗಿದೆ ಎಂದಿದ್ದಾರೆ.
ಮೂರು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಗಂಗಾವಳಿ ನದಿಯಲ್ಲಿ ಕೆಲಸ ಮಾಡುವುದು ಸುಲಭದ ಮಾತಲ್ಲ. ನೀರಿನಲ್ಲಿ ಮುಳುಗಿದಾಗ, ಕಣ್ಣುಗಳ ಮುಂದೆ ಏನೂ ಕಾಣಿಸುವುದಿಲ್ಲ. ಮಣ್ಣು ನೀರಿನಲ್ಲಿ ಬೆರೆತಿರುವುದರಿಂದ ನೀರು ಕಾಣುತ್ತಿಲ್ಲ ಎಂದರು. ಪ್ರಸ್ತುತ 8 ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ನಾನು ಅಂದುಕೊಂಡಿರುವ ಮಟ್ಟಿಗೆ ಇದು ನಮಗೆ ಕಷ್ಟಕರವಾದ ಕೆಲಸವಾಗಿದೆ ಎಂದು ಈಶ್ವರ್ ಮಲ್ಪೆ ಹೇಳಿದ್ದಾರೆ.
