
ನಮ್ಮ ದಾವಣಗೆರೆ ಜೂ. 15: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ನಿಂದ ಜೂನ್ 16 ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಬೃಹತ್ ವೇದಿಕೆ ಕಾರ್ಯಕ್ರಮ ಇರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಮಾರ್ಗ ಮತ್ತು ವಾಹನಗಳ ನಿಲುಗಡೆ ಸ್ಥಳ ಬದಲಾಯಿಸಿ ಜಿಲ್ಲಾ ದಂಡಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ಆದೇಶಿಸಿದ್ದಾರೆ.
Join Whatsapp Group NammaDavangere 04
Join Whatsapp Group NammaDavangere 05
ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಸುಗಳು ಸಂಚರಿಸುವ ಮಾರ್ಗ: ಜೂನ್ 16 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹರಿಹರ ಕಡೆಯಿಂದ ದೊಡ್ಡಬಾತಿ ಮುಖಾಂತರ ದಾವಣಗೆರೆಗೆ ಹಳೇ ಪಿ.ಬಿ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಎನ್.ಹೆಚ್-48 ನಲ್ಲಿ ಚಲಿಸಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ನೂತನವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ಚಲಿಸಬೇಕು.
ಚಿತ್ರದುರ್ಗ ಮತ್ತು ಸಂತೆಬೆನ್ನೂರು ಮಾರ್ಗವಾಗಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಅವರಗೆರೆ ಮಾರ್ಗವಾಗಿ ಬಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಸಂಚರಿಸುವುದು. ಜಗಳೂರು ಮತ್ತು ಕಂಚಿಕೆರೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ನೇರವಾಗಿ ಅರಳಿಮರ ಮತ್ತು ವೆಂಕಟೇಶ್ವರ ಸರ್ಕಲ್ಗೆ ಆಗಮಿಸದೇ ಬೇತೂರು ಹಳ್ಳದ ಹತ್ತಿರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಹಾಗೂ ಹತ್ತಿಸಿಕೊಂಡು ಅಲ್ಲಿಂದಲೇ ವಾಪಾಸ್ ಹೊರಡುವುದು.
ಚನ್ನಗಿರಿ ಕಡೆಯಿಂದ ಹದಡಿ ರಸ್ತೆ ಮೂಲಕ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹದಡಿ ಅಂಡರ್ ಪಾಸ್ ಮೂಲಕ ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಇಲ್ಲಿಂದಲೇ ವಾಪಸ್ ಹೋಗಬೇಕು.
ಎಲ್ಲಾ ತರಹದ ಭಾರಿ ಮತ್ತು ಲಘು ಗೂಡ್ಸ್ ವಾಹನಗಳು: ಎಲ್ಲಾ ತರಹದ ಭಾರಿ & ಲಘು ಗೂಡ್ಸ್ ವಾಹನಗಳು ದಾವಣಗೆರೆ ನಗರದ ಹಳೇ ಪಿ.ಬಿ ರಸ್ತೆಯ ಆಯುರ್ವೇದಿಕ್ ಕಾಲೇಜ್ ನಿಂದ ಡಿ.ಸಿ.ಎಂ ಅಂಡರ್ ಬ್ರಿಡ್ಜ್ ವರೆಗೆ ಹಾಗೂ ನಗರದ ಹದಡಿ ರಸ್ತೆಯಲ್ಲಿ ಐ.ಟಿ.ಐ ಕಾಲೇಜ್ ಸರ್ಕಲ್ ನಿಂದ ಜಯದೇವ ಸರ್ಕಲ್ ಕಡೆಗೆ ಚಲಾಯಿಸದಂತೆ ಹಾಗೂ ನಗರದ ಶಾಮನೂರು ರಸ್ತೆಯಲ್ಲಿ ಶಾಮನೂರು ಅಂಡರ್ ಬ್ರಿಡ್ಜ್ ನಿಂದ ಲಕ್ಷ್ಮೀ ಫ್ಲೋರ್ ಮಿಲ್ ಮತ್ತು ಶಾರದಾಂಭ ಸರ್ಕಲ್ ಕಡೆಗೆ ಚಲಾಯಿಸಬಾರದು.
ಖಾಸಗಿ ಬಸ್ ನಿಲ್ದಾಣದ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಬಸ್ಗಳು ಈ ಬಸ್ ನಿಲ್ದಾಣದಿಂದ ಕಾರ್ಯ ನಿರ್ವಹಿಸದಂತೆ ಹಾಗೂ ಅವುಗಳು ಆ ದಿನ ಎ.ಪಿ.ಎಂ.ಸಿ ಮತ್ತು ಮಾಗನೂರು ಬಸಪ್ಪ ಮೈದಾನದಿಂದ ಕಾರ್ಯ ನಿರ್ವಹಿಸಬೇಕು.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನ: ಕಾರ್ಯಕ್ರಮದ ನಿಮಿತ್ತ ಆಗಮಿಸುವ ಎಲ್ಲಾ ಬಸ್ ಗಳು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಹಾಗೂ ಅರುಣ ವೃತ್ತದಿಂದ ವಿನೋಬ ನಗರ 3 ನೇ ಮುಖ್ಯ ರಸ್ತೆಯ ಎಡಬಾಗದಲ್ಲಿ ಹಾಗೂ ನಗರದ ಪುಷ್ಪಾಂಜಲಿ ಚಿತ್ರಮಂದಿರದಿಂದ ಈರುಳ್ಳಿ ಮಾರ್ಕೇಟ್ ವರೆಗೆ ರೈಲ್ವೆ ಹಳಿ ಪಕ್ಕದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಬಸ್ಗಳನ್ನು ನಿಲ್ಲಿಸಬೇಕು.
ಎಲ್ಲಾ ದ್ವಿಚಕ್ರ ವಾಹನಗಳು ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಾಸ್ಥಾನದ ಆವರಣ ಹಾಗೂ ಆರ್.ಎಲ್. ಲಾ ಕಾಲೇಜ್ ಹಿಂಭಾಗದ ಮೈದಾನದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ನಾಲ್ಕು ಚಕ್ರದ ವಾಹನಗಳು ಅರುಣ ವೃತ್ತದ ಬಳಿ ಇರುವ ಹೊಳೆಹೊನ್ನೂರು ತೋಟದ ಖಾಲಿ ಜಾಗದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.